ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ ನಮಸ್ಕಾರ, ನಮ್ಮೆಲ್ಲ ಓದುಗಾರರಿಗೆ ಹೃದಯಪೂರ್ವಕ ವಂದನೆಗಳು. ನಿಮ್ಮ ಅಪಾರ ಪ್ರೀತಿ ಹಾಗೂ ನೀಡಿದ ಬೆಂಬಲ ನಮಗೆ ಶಕ್ತಿ ಮತ್ತು ಸ್ಪೂರ್ತಿ ನೀಡಿದೆ. ಇಂತಹ ನಿಮ್ಮ ಬೆಂಬಲವು ಸದಾ ನಮ್ಮ ಜೊತೆಗೆ ಇರಲಿ ಎಂಬ ಆಶಯದೊಂದಿಗೆ ಇಂದು ನಾವು ಪ್ರವಾಸ ಸ್ಥಳವಾದ ಕರ್ಕಾಳದ ಬಗ್ಗೆ ವಿವರವಾಗಿ ತಿಳಿದುಕೊಳ್ಳೊಣ. ಪ್ರಕೃತಿಯ ಸುಂದರತೆ, ಐತಿಹಾಸಿಕ ಮಹತ್ವ, ಮತ್ತು ಸಾಂಸ್ಕ್ರತಿಕ ವೈಶಿಷ್ಯತೆಗಳನ್ನು ಹೊಂದಿರುವ ಈ ಊರು ಪ್ರವಾಸಿಗರ ಮನಸ್ಸನ್ನು ಸೆಳೆಯುವಂತೆ ಮಾಡುತ್ತದೆ. ಈಗ ಈ ಸುಂದರ ಸ್ಥಳದ ಬಗ್ಗೆ ಸಂಕ್ಷಿಪ್ತ ಯಾತ್ರೆ ಮಾಡೋಣ. ಕಾರ್ಕಳದ ಬಸದಿ, ದೇವಾಸ್ಥಾನ, ಚರ್ಚ್, ಮಸೀದಿ, ಹೀಗೆ ಹಲವಾರು ಪುರಾತನ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಧಾರ್ಮಿಕ ಕಳೆಯಿರುವ ಅಪರೂಪದ ನಗರವೇ ಕಾರ್ಕಳ. ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ತಾಲೂಕು ಕಾರ್ಕಳ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ನೆಲೆಸಿದ್ದು, ಶತಮಾನಗಳ ಹಿಂದೆ ಜೈನರ ಆಳ್ವಿಕೆಯ ಕಾಲದಲ್ಲಿ "ಪಾಂಡ್ಯ ನಗರಿ" ಎಂದು ಕರೆಯಲಾಗುತ್ತಿತ್ತು. ಸುತ್ತ ಮುತ್ತಲಲ್ಲಿ ಹೆಚ್ಚಾಗಿ ಕಪ್ಪು ಬಂಡೆಗಳು ಕಂಡುಬರುವ ಕಾರಣದಿಂದಾಗಿ ಈ ಪ್ರದೇಶವನ್ನು ಹಿಂದೆ ಕರಿಕಲ್ಲು ಎಂದು ಕರೆಯಲಾಗುತ್ತಿತ್ತು. ತುಳು ಭಾಷೆಯಲ್ಲಿ ಇದನ್ನು "ಕಾರ್ಲ" ಎಂದು ಕರೆಯುತ್ತಾರೆ. ಕಾರ್ಲ ಎಂಬ ಪದವು ಕನ್ನಡದಲ್ಲಿ ಕಾರ್ಕಳ ಎಂಬ ರೂಪಕ್ಕೆ ಬದಲಾಯಿತು. ಕಾರ್ಕಳದ ಪ್ರಾಚೀನ ಇತಿಹಾಸದತ್ತ...