ತುಳುನಾಡಿನ ಭತ್ತ ಬೇಸಾಯ
ತುಳುನಾಡಿನ ಭತ್ತ ಬೇಸಾಯತ
ತುಳುನಾಡು ನಮ್ಮ ಭಾರತ ದೇಶದ ನೈರತ್ಯ ಭಾಗದಲ್ಲಿರುವ ಒಂದು ಕಾರಾವಳಿ ಪ್ರದೇಶ ಇಲ್ಲಿನ ಜನರು ದ್ರಾವಿಡ ಭಾಷೆಯಾದ ತುಳುವನ್ನು ಮಾತನಾಡುತ್ತಾರೆ. ಇಲ್ಲಿನ ಜನರ ಜೀವನ ಶೈಲಿ ವಿಭಿನ್ನವಾಗಿದೆ. ಇಲ್ಲಿ ಹಲವಾರು ಭಾಷೆಯನ್ನು ಮಾತನಾಡುವ ಜನರನ್ನು ಕಾಣಬಹುದು.ತುಳುನಾಡನ್ನು ಮುಖ್ಯವಾಗಿ ಪರಶುರಾಮ ಸೃಷ್ಠಿಯ ನಾಡೆಂದು ಕರೆಯುತ್ತಾರೆ. ಪುರಾಣಗಳ ಪ್ರಕಾರ ಪರಶುರಾಮನು ಈ ತುಳುನಾಡನ್ನು ಸಮುದ್ರದಿಂದ ಮರಳಿ ಪಡೆದನು. ಇದನ್ನು ಕೇರಳದ ಬಹಳ ಹಿಂದಿನ ಕೃತಿಯಾದ ಮಳಯಾಳಂನ ಕೇರಳೋತ್ಪತ್ತಿ ಕೃತಿಯ ಪ್ರಕಾರ ವಿಷ್ಣುವಿನ ಆರನೇ ಅವತಾರವಾದ ಪರಶುರಾಮನು ತನ್ನ ಕೊಡಲಿಯನ್ನು ಸಮುದ್ರಕ್ಕೆ ಎಸೆದನು. ಇದರಿಂದ ಹೊಸ ಭೂ ಪ್ರದೇಶವು ಹುಟ್ಟಿಕೊಂಡಿತು ಎಂಬ ಇತಿಹಾಸವಿದೆ. ಹೀಗೆ ಹುಟ್ಟಿಕೊಂಡ ಭೂಮಿಯು ಉಪ್ಪಿನಿಂದ ಕೂಡಿತ್ತು ಮತ್ತು ಇಲ್ಲಿನ ಜನರಿಗೆ ವಾಸಿಸಲು ಸೂಕ್ತ ಜಾಗವಲ್ಲವೆಂದು ಹಾಲಾಹಲ ಎಂಬ ಪವಿತ್ರ ವಿಷವನ್ನು ಉಗುಳಿದರು, ಇದರ ನಂತರ ಭೂಮಿಯ ಮಣ್ಣಿನ ಗುಣ ಬದಲಾಯಿತು. ಭೂಮಿಯು ಫಲವತ್ತದ ಹಚ್ಚ ಹಸುರಾಗಿ ಮಾರ್ಪಡಯಿತು. ನಂತರ ಸರ್ಪರಾಜ ವಾಸುಕಿಯನ್ನು ಆಹ್ವಾನಿಸಿದನು ಎಂದು ಪುರಾಣದ ಕಥೆಗಳು ಹಾಗೂ ಕೃತಿಗಳು ತಿಳಿಸುತ್ತದೆ.
ಈ ಫಲವತ್ತದ ತುಳುನಾಡಿನ ಮಣ್ಣಿನ ಜನರು ಹಲವಾರು ಕೃಷಿಯನ್ನು ಮಾಡುತ್ತಾರೆ. ಇಲ್ಲಿ ಮುಖ್ಯವಾಗಿ ಅಕ್ಕಿ, ಕಡಲೆ, ಹುರುಳಿ, ತೆಂಗಿನಕಾಯಿ, ಅಡಿಕೆ, ಕೊಕೋ, ಮತ್ತು ಗೋಡಂಬಿ, ಮೆಣಸನ್ನು ಬೆಳೆಯುತ್ತಾರೆ. ತೆಂಗು, ಅಡಿಕೆ ಕೃಷಿ ಮತ್ತು ಮೀನುಗಾರಿಕೆ ತುಳುನಾಡಿನ ಜನರ ಆದಾಯದ ಮೂಲವಾಗಿದೆ. ಇಂದು ನಾವು ತುಳುನಾಡಿನ ಭತ್ತ ನಾಟಿಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ. ಅಕ್ಕಿಯ ಬೆಳೆಯನ್ನು ಗದ್ದೆಯಲ್ಲಿ ಬೆಳೆಯಲಾಗುತ್ತದೆ. ವರ್ಷಕ್ಕೆ ಮೂರು ಬಾರಿ ಬೆಳೆ ಬೆಳೆಯಲಾಗುತ್ತದೆ. ಈಗ ನೀರಿನ ಸಮಸ್ಯೆಯಿಂದಾಗಿ ಎರಡು ಬೆಳೆ ಮಾತ್ರ ಬೆಳೆಯಲಾಗುತ್ತಾದೆ.
ಸಾಗೋಳಿಯನ್ನು ತುಳುವಿನ ತಿಂಗಳ ಹೆಸರಿನ ಪ್ರಕಾರ ಭತ್ತನಾಟಿ ಮಾಡುತ್ತಾರೆ. ಪಗ್ಗು, ಬೇಸ, ಕಾರ್ತೆಲು, ಆಟಿ, ಸೋನ, ಕನ್ಯೆ, ಬೊಂತ್ಯೊಲು, ಜಾರ್ದೆ, ಪೆರಾರ್ದೆ, ಪೊಯೊಂತೆಲ್, ಮಾಯಿ, ಸುಗ್ಗಿ. ಇದಿಷ್ಟು ತುಳುನಾಡಿನ ತಿಂಗಳುಗಳ ಹೆಸರು. ಬೆಳೆಯನ್ನು ಕಾರ್ತೆಲಿನಲ್ಲಿ ಬೆಳೆ ನಾಟಿ ಮಾಡಿ ಬೊಂತೆಲು ತಿಂಗಳಿನಲ್ಲಿ ಬೆಳೆ ಕೊಯ್ಯುತ್ತಾರೆ. ನಂತರ ಜಾರ್ದೆಯಲ್ಲಿ ಹಾಕಿದ ಬೆಳೆಯನ್ನು ಸುಗ್ಗಿಯಲ್ಲಿ ಕೊಯ್ಯುತ್ತಾರೆ. ಜಾರ್ದೆಯಲ್ಲಿ ಬಿತ್ತಿ ಸುಗ್ಗಿಯಲ್ಲಿ ಕಟಾವು ಮಾಡುತ್ತಾರೆ. ಪಗ್ಗುವಿನಲ್ಲಿ ಬಿತ್ತಿ ಬೇಸದಲ್ಲಿ ಕಟಾವು ಮಾಡುತ್ತಾರೆ. ಇದನ್ನು ಕೊಳಕೆ ಎನ್ನುತ್ತಾರೆ. "ತೆನೆ ಹಬ್ಬ" ಹೊಸ ಅಕ್ಕಿ ಊಟ ಮಾಡುವ ಕ್ರಮವಿದೆ ಇದನ್ನು ತುಳುವಿನಲ್ಲಿ "ಪುದ್ದರ್ ವನಸ್" ಅಥವ "ಕುರಾಲ್ ಪರ್ಬ" ಎನ್ನಲಾಗುತ್ತದೆ. ಇದೊಂದು ವಿಭಿನ್ನ ರೀತಿಯ ಆಚರಣೆ. ಮನೆಯೊಳಗೆ ದಾನ್ಯಗಳನ್ನು ತುಂಬುವ ಕ್ರಮ, ಈ ಹಬ್ಬವನ್ನು ಸಾಮಾನ್ಯವಾಗಿ ಕಾವೇರಿ ಸಂಕ್ರಮಣದ ಮರುದಿನ ಅಂದರೆ "ಕನ್ಯೆ" ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಭತ್ತದ ಬೀಜದಲ್ಲಿ ಹಲವಾರು ವಿಧಗಳಿವೆ, ಕಾಯನೆ, ಸುಗ್ಗಿ ಕಾಯಾನೆ, ಗೆಂದಸಾಲೆ, ದೀರ್ಸಾಲೆ, ಟೊನ್ನೊರ್, ದಡ್ದಂಬಿಗೆ, ಹೀಗೆ ಹಲವು ಭತ್ತದ ಬೀಜಗಳಿವೆ, ಬೀಜವನ್ನು ತುಳುವಿನಲ್ಲಿ "ಬಾರ್" ಎನ್ನಲಾಗುತ್ತದೆ. ಟೊನ್ನೊರ್ ಎಂಬ ಬೆಳೆಯು ಬೇಗ ಬೆಳೆಯುತ್ತದೆ. ಬೇರೆ ಬೆಳೆಗಳು 90 ದಿನಗಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಬೀಜದಿಂದ ತೆನೆಯನ್ನಾಗಿ ಮಾಡಿ, ಗದ್ದೆಯಲ್ಲಿ ಸಾಲಾಗಿ ನಾಟಿ ಮಾಡುವುದನ್ನು "ನೇಜಿ" ಎನ್ನುತ್ತಾರೆ. ನೀರಿನ ಅನುಕೂಲತೆಗೆ ತಕ್ಕಂತೆ ಬೆಳೆಯನ್ನು ಬೆಳೆಯಲಾಗುತ್ತದೆ. ಗದ್ದೆಯನ್ನು ಉಳುಮೆ ಮಾಡಿ ಬೀಜ ಬಿತ್ತುತ್ತಾರೆ. ಒಮ್ಮೆ ಉಳುಮೆ ಮಾಡಿ ಬರಿ ಎಳೆದು ಮತ್ತೆ 2-3 ಬಾರಿ ಉಲುಮೆ ಮಾಡಿ ಹಲಗೆ ಎಳೆದು ಆಮೇಲೆ ಊರ ತೆಗೆದು ಗದ್ದೆಯನ್ನು ಮುಟ್ಟುತ್ತಾರೆ. ಹೀಗೆ 2 ಸಾಲು, 3 ಸಾಲು, 4 ಸಾಲಿನಂತೆ ಹದವಾಗಿ ಉಳುಮೆ ಮಾಡುತ್ತಾರೆ. ಈಗ ಟ್ರಾಕ್ಟರ್ ನಂತಹ ಆಧುನಿಕ ಉಪಕರಣಗಳಿಂದ ಮಾಡುಲಾಗುತ್ತದೆ. ಮೊದಲು ಕೋಣ ಅಥವ ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತು.
ಕೋಣದೊಂದಿಗೆ ಉಳುಮೆ ಮಾಡಲು ಒಂದು ಕ್ರಮವಿದೆ. ಬೇರೆ ಜಿಲ್ಲೆಗಳಲ್ಲಿ ಕೋಣವನ್ನು ಬಲದಿಂದ ಎಡಕ್ಕೆ ತಿರುಗಿಸುತ್ತಾರೆ. ಆದರೆ ತುಳುನಾಡಿನ ಕಡೆ ಎಡದಿಂದ ಬಲಕ್ಕೆ ತಿರುಗಿಸಲಾಗುತ್ತದೆ. ಉಳುಮೆ ಮಾಡಲು 2 ಕೋಣ ಅಥವ ಎತ್ತು ನೂಗ. ಈ ನೂಗಕ್ಕೆ, 4 ಹಗ್ಗ . ಒಂದು ಹಗ್ಗ "ಪುಣ"ಕ್ಕೆ ಕಟ್ಟಲು 2 ಹಗ್ಗ ಅದರ ಬದಿಯನ್ನು ಕಟ್ಟಲು ಇನ್ನೊಂದು ನೇಗಿಲನ್ನು ಕಟ್ಟಲು ಬಳಸುತ್ತಾರೆ. ಹೀಗೆ ಉಳುಮೆ ಮಾಡಲು ಕೋಣವನ್ನು ಸಿದ್ದ ಪಡಿಸಿ ಎರಡು ಜನರ ಸಹಾಯದಿಂದ ಉಳುಮೆ ಮಾಡಲಾಗುತ್ತಾದೆ. ಭತ್ತವನ್ನು ಕೊಯ್ಯಲು "ಪಾರ್" ಕತ್ತಿಯನ್ನು ಬಳಸುತ್ತಾರೆ. ತಲೆಗೆ ಅಡಿಕೆಯ ಹಾಲೆಯಿಂದ ಮಾಡಿದ "ಮುಟ್ಟಲೆ"ಯನ್ನು ಬಳಸುತ್ತ ಗದ್ದೆಯಲ್ಲಿ ಸಾಲಾಗಿ ಭತ್ತ ಕೊಯುತ್ತ ಸಂಧಿ, ಪಾಡ್ದನವನ್ನು ಹೇಳುತ್ತಾರೆ.
ಹೀಗೆ ಭತ್ತವನ್ನು 2 ರಿಂದ 3 ದಿನ ಗದ್ದೆಯಲ್ಲೆ ಒಣಗಿಸುತ್ತಾರೆ. ನಂತರ ಭತ್ತದ ಪೈರನ್ನು ಹಗ್ಗದಿಂದ ಹೊರೆಯಾಗಿ ಕಟ್ಟುತ್ತಾರೆ. ಸುಗ್ಗಿಯ ಸಮಯದಲ್ಲಿ ಕಟಾವು ಮಾಡಿದ ಭತ್ತದ ಪೈರು ಹಗುರವಿರುತ್ತದೆ. ಕಾರ್ತೆಲು ಸಮಯದಲ್ಲಿ ಕಟಾವು ಮಾಡಿದ ಭತ್ತದ ಪೈರು ಮಳೆಯ ಅಭಾವದಿಂದ ಸ್ವಲ್ಪ ಭಾರವಿರುತ್ತದೆ. ಈ ಭತ್ತದ ಹೊರೆಯನ್ನು ಒಣಗಿಸಿ ಅದನ್ನು "ಪಡಿಮಂಚ"ಕ್ಕೆ ಬಡಿಯುತ್ತಾರೆ. ಇದರಿಂದ ಭತ್ತ ಹಾಗೂ ಹುಲ್ಲು ಬೇರ್ಪಟ್ಟು "ಪಡಿಮಂಚ"ದ ಕೆಳಗೆ ಭತ್ತದ ರಾಶಿ ಸಂಗ್ರಹಣೆಯಾಗುತ್ತದೆ. ದನಗಳ ಮೇವಿಗೆ ಪೈರನ್ನು "ಬೈಹುಲ್ಲಾಗಿ" ಬಳಸುತ್ತಾರೆ. ಗಾಳಿಯಲ್ಲಿ ಹಾರಿಸುವ ಮೂಲಕ ಭತ್ತ ಹಾಗೂ ಕಸಕಡ್ಡಿಯನ್ನು ಬೇರ್ಡಿಸುತ್ತಾರೆ.
ಒಣಗಿದ ಭತ್ತವನ್ನು ಹಂಡೆಯಲ್ಲಿ ಬೇಯಿಸಿ, ಮತ್ತೆ ಅದನ್ನು ಅಂಗಳಕ್ಕೆ ಹರಡಿ ಚೆನ್ನಾಗಿ ಒಣಗಿಸಿ ಈ ಭತ್ತವನ್ನು "ಉಜ್ಜರಿ"ಯಲ್ಲಿ ಬಡಿದು ಅಕ್ಕಿ ಮಾಡುತ್ತಾರೆ. ಈ ಅಕ್ಕಿಯನ್ನು ವ್ರತ್ತಕಾರದ ಚೆಂಡಿನ ರೀತಿಯಲ್ಲಿ "ಮುಡಿ"ಯನ್ನು ಕಟ್ಟುತ್ತಾರೆ. ಮುಡಿ ಎಂದರೆ 3 ಕಲಸೆ, ಸಾಮಾನ್ಯವಾಗಿ ನಾವು ಬಳಸುವ ಸೇರಿನಲ್ಲಿ 14 ಸೇರು. ಹೀಗೆ 3 ಕಲಸೆ ಅಕ್ಕಿಯನ್ನು ಬೈಹುಲ್ಲು ಮತ್ತು ಹಗ್ಗದಿಂದ ಗಟ್ಟಿಯಾಗಿ ಚೆಂಡಿನ ರೀತಿಯಲ್ಲಿ ಕಟ್ಟುತ್ತಾರೆ. ಇತ್ತಿಚಿನ ದಿನಗಳಲ್ಲಿ ಉಜ್ಜರಿಯಲ್ಲಿ ಬಡಿಯುವ ಕ್ರಮವಿಲ್ಲ. ಭತ್ತವನ್ನು ಅಕ್ಕಿಯಾಗಿ ಮಾಡಲು ರೈಸ್ ಮಿಲ್ಗಳಿವೆ. ಮಿಲ್ನಲ್ಲಿ ಭತ್ತವನ್ನು ದೊಡ್ಡ ಕಡಾಯಿಗೆ ಹಾಕಿ ಬೇಯಿಸುತ್ತಾರೆ. ನಂತರ ಅದನ್ನು ಒಣಗಿಸಿ ಅದರಿಂದ ಅಕ್ಕಿಯನ್ನು ಮಾಡುತ್ತಾರೆ.
ಹೀಗೆ ಭತ್ತವನ್ನು ಬೆಳೆದು ಉಳುಮೆ ಮಾಡಿ ಅಕ್ಕಿ ತಯಾರಿಸಲಾಗುತ್ತಾದೆ. ರೈತ ದೇಶದ ಬೆನ್ನೆಲುಬು, ರೈತನಿಗೆ ಹೆಚ್ಚಿನ ಮಹತ್ವವಿದೆ. ತುಳುನಾಡಿನಲ್ಲಿ ಭತ್ತ ವಿಶೇಷವಾಗಿ ಪ್ರಮುಖ ಆಹಾರ ದಾನ್ಯವಾಗಿದೆ. ಈಗ ಗದ್ದೆಗಳು ಕ್ರಮೇಣ ಮರೆಯಾಗಿ ಅಡಿಕೆ ತೋಟದ ಸಾಲುಗಳನ್ನೆ ನಾವು ನೋಡಬಹುದು. ರೈತರು ಅನುಭವಿಸುವ ಕಷ್ಟ ನಷ್ಟಗಳಿಂದ ಗದ್ದೆಗಳು ಕಡಿಮೆಯಾಗುತ್ತಿದೆ. ಸರಿಯಾದ ನೀರಿನ ವ್ಯವಸ್ಥೆ ಇಲ್ಲ, ಅದಕ್ಕೆ ಹರಡುವ ರೋಗಗಳು, ಕೆಲಸಕ್ಕೆ ಜನವಿಲ್ಲ, ಕಾಡು ಪ್ರಾಣಿ - ಪಕ್ಷಿಗಳ ಹಾವಳಿ, ಕಟಾವಿನ ಸಮಯದಲ್ಲಿ ಮಳೆಯ ಸಮಸ್ಯೆ. ಹೀಗಾಗಿ ಮಾರಾಟಕ್ಕಲ್ಲದೆ ಮನೆ ಮಟ್ಟಿಗಾಗಿ ಕೆಲವು ಮನೆಗಳಲ್ಲಿ ಭತ್ತ ಬೆಳೆಯುತ್ತಿದ್ದಾರೆ.
ನಮ್ಮ ಸಂಸ್ಕ್ರತಿ ನಮ್ಮ ಹೆಮ್ಮೆ
ಜೈ ತುಳುನಾಡ್
Take a moment to read the content and please support with commenting
ReplyDelete👌
ReplyDelete👍 nice
ReplyDelete