ತುಳುನಾಡಿನ “ನಾಗಾರಾಧನೆ”

ತುಳುನಾಡಿನ “ನಾಗಾರಾಧನೆ”

ನಮಸ್ಕಾರ, 

ನಮ್ಮೆಲ್ಲ ಪ್ರೀತಿಯ ಓದುಗಾರರಿಗೆ ನಮಸ್ಕಾರಗಳು, ನಾಗ ನಡೆಯ ಸರ್ಪ ಜಡೆಯ ಪುಣ್ಯ ನಾಡು ನಮ್ಮ ಈ ತುಳುನಾಡು.  ನಾಗದೇವರು ನಡೆದಾಡಿದ ನಾಡು, ಹೆಡೆ ಎತ್ತಿ ಮೆರೆದ ನಾಡು ಎಂದು ತುಳುನಾಡನ್ನು ವರ್ಣಿಸುತ್ತಾರೆ. ಈ ನಮ್ಮ ತುಳುನಾಡನ್ನು ನಾಗದೇವತೆಗಳ ಸೃಷ್ಟಿ ಎಂದು ಕರೆಯುತ್ತಾರೆ. ನಾವು ಮೊದಲೇ ನೋಡಿದಂತೆ, ಓದಿದಂತೆ, ಕೇಳಿದಂತೆ, ತುಳುನಾಡು ಎನ್ನುವಾಗಲೆ ನಮ್ಮ ಕಣ್ಣ ಮುಂದೆ ಅನೇಕ ಸಂಸ್ಕೃತಿಗಳು,ಆರಾಧನೆಗಳು, ಕ್ರೀಡೆಗಳು ಆಚರಣೆಗಳು ಮೂಡಿಬರುತ್ತವೆ.

ನುಡಿದ ಮಾತನ್ನು ತಪ್ಪದೆ ಅನುಸರಿಸುವ ಇಲ್ಲಿನ ದೈವಗಳ ಕಾರ್ಣಿಕ ಒಂದು ಕಡೆ ಇದ್ದರೆ, ಕಂಬಳ ಕೋಲಿಯಂಕದಂತಹ ಜಾನಪದ ಕ್ರೀಡೆಗಳು ಇನ್ನೊಂದು ಕಡೆ ವಿಶಿಷ್ಟವಾಗಿ ಕಾಣಿಸುತ್ತವೆ. ಇಂತಹ ವಿಭಿನ್ನ ಆಚರಣೆ ಹೊಂದಿರುವ ತುಳುನಾಡಿನಲ್ಲಿ ನಾಗಾರಾಧನೆಯು ಮಹತ್ವದ ಸ್ಥಾನ ಪಡೆದುಕೊಂಡಿದೆ. ಇಲ್ಲಿ ನಾಗರಾಧನೆಗೆ  ಸಂಬಂಧಿದಂತೆ ನಾಗಬನ, ನಾಗನಕಲ್ಲು ,ನಗರಹುತ್ತ, ನಾಗನದೇವಾಲಯ ಕಾಣಬಹುದು.  ಈ ನಾಗಾರಾಧನೆ ಇಷ್ಟೊಂದು ಮಹತ್ವ ಪಡೆಯಲು ಕಾರಣವೇನು..? ಅದರ ಹಿನ್ನೆಲೆಯನ್ನು ತಿಳಿದುಕೊಳ್ಳೋಣ.

ಪರಶುರಾಮರು ತನ್ನ ತಂದೆ "ಜಮಧಗ್ನಿ" ಮಹರ್ಷಿಗಳ ಸಾವಿಗೆ ಕಾರಣರಾದ ಕ್ಷತ್ರಿಯರನ್ನು ಕೊಂದು ಅದರ ನಂತರ ತನ್ನ ಪಾಪದ ಪರಿಹಾರರ್ಥವಾಗಿ ತಮ್ಮಲ್ಲಿರುವ ಎಲ್ಲಾ ಭೂಮಿಯನ್ನು ದಾನ ಮಾಡಿ ತಮ್ಮ ಕೊಡಲಿಯನ್ನು ಹಿಡಿದುಕೊಂಡು ಪಶ್ಚಿಮಘಟ್ಟದ ಕಡೆ ಬರುತ್ತಾರೆ. ತಮ್ಮ ಕೊಡಲಿಯನ್ನು ಸಮುದ್ರದ ಕಡೆ ಎಸೆಯುತ್ತಾರೆ. ಅವರು ಎಸೆದ ಕೊಡಲಿ ಬಿದ್ದ ಜಾಗದಲ್ಲಿ ತಪ್ಪಸ್ಸಿಗೆ ಕುಳಿತುಕೊಳ್ಳುತಾರೆ.  ಸುತ್ತಲು ಸಮುದ್ರ ಇದ್ದ ಪರಿಸರವಾದ್ದರಿಂದ ಉಪ್ಪಿನ ಅಂಶ ಹೆಚ್ಚಾಗಿರುತ್ತದೆ. ಇದಕ್ಕಾಗಿ ತಮ್ಮ ತಪಸ್ಸಿನಿಂದ ಪರಶುರಾಮ ಗುರುಗಳು ಸರ್ಪರಾಜ ವಾಸುಕಿಯನ್ನು ಒಲಿಸಿಕೊಂಡು, ತಾವು ಇದ್ದ ಭೂಮಿಗೆ ಸರ್ಪಗಳನ್ನು ಕಳುಹಿಸಿಕೊಡುವಂತೆ ಬೇಡುತ್ತಾರೆ. ಗುರು ಪರಶುರಾಮರ ಬೇಡಿಕೆಗೆ ಸಮ್ಮತಿಸಿದ ಸರ್ಪರಾಜ ವಾಸುಕಿಯು ಲಕ್ಷಓಪಧಿಯಲ್ಲಿ ಸರ್ಪಗಳನ್ನು ಭೂಮಿಗೆ ಕಳುಹಿಸುತ್ತಾರೆ. 

ನಂತರ ಭೂಮಿಗೆ ಬಂದ ಸರ್ಪಗಳು ಪಾತಾಳದವರೆಗೆ  ಹೊಕ್ಕು ರಂದ್ರಗಳ ಮೂಲಕ ಸಿಹಿ ನೀರನ್ನು ಚಿಮ್ಮಿಸುತ್ತವೆ.  ಭೂ ಗರ್ಭದಿಂದ ಮಣ್ಣನ್ನು ತಂದು ಹುತ್ತವನ್ನು ಕಟ್ಟುತ್ತವೆ. ಈ ನಾಗದೇವರ ದಯೆಯಿಂದ ಸಿಹಿ ನೀರಿನ ಪ್ರಮಾಣ ಹೆಚ್ಚಾಗಿ ಜನರು ವಾಸಿಸಲು ಯೋಗ್ಯವಾದ ಭೂಮಿಯಾಗಿ ಮಾರ್ಪಡಗುತ್ತದೆ. ಹೇರಳವಾದ ಮರಗಿಡಗಳು ಬೆಳೆದು ತುಳುನಾಡು ಸಮೃದ್ಧಿಯನ್ನು ಪಡೆಯುತ್ತದೆ.  ಹೀಗಾಗಿ ಪರಶುರಾಮರನ್ನು ತುಳುನಾಡಿನ ಸೃಷ್ಟಿಕರ್ತನೆಂದು ಪರಿಗಣಿಸಲಾಗಿದೆ. ಇಲ್ಲಿನ ಜನರು ನಾಗಗಳನ್ನು ದೇವರಂತೆ ಪೂಜಿಸುತ್ತಾರೆ.  ತುಳುನಾಡಿನಲ್ಲಿ ಸುಮಾರು 30ಕ್ಕೂ ಹೆಚ್ಚು ನಾಗ ದೇವಾಲಯಗಳಿದ್ದು, ಭಕ್ತಿಯಿಂದಲೇ ನಾಗಾರಾಧನೆ ತುಳುನಾಡಿನಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.

ಶಿವನ ಆಭರಣವಾಗಿ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ ,ಭಗವಾನ್ ಶ್ರೀ ವಿಷ್ಣುವಿನ ಹಾಸಿಗೆಯಾಗಿ,ಕುಂಡಳಿನಿ ಶಕ್ತಿಯ ಪ್ರತಿಕವಾಗಿ, ಯುದ್ಧಗಳಲ್ಲಿ ಸರ್ಪಸ್ತ್ರವಾಗಿ , ಸಮುದ್ರ ಮಂಥನ ಸಮಯದಲ್ಲಿ ಸುರಾ ಮತ್ತು ಅಸುರರ ನಡುವೆ ಹಗ್ಗವಾಗಿ , ಕೌರವೇಂದ್ರ ದುರ್ಯೋದನನ ಧ್ವಜ ಲಾಂಛನವಾಗಿ ,ಆದಿಶೇಷನಾಗಿ, ಜೈನ ಪಾರ್ಶ್ಶ್ವನಾಥ ತೀರ್ಥಕರರ ಶಿರೂಲಾಂಛನವಾಗಿ ಹೀಗೆ ನಾಗನನ್ನು ನಾವು ಪುರಾಣಗಳಲ್ಲಿ ಹಲವೆಡೆ ಗಮನಿಸಬಹುದು. ತುಳುನಾಡಿಗೆ ಅಧಿಪತಿಯಾಗಿ ಇಲ್ಲಿನ ಜನರ ಆರಾಧ್ಯ ದೇವರಾಗಿದ್ದಾನೆ.  

ವಿಶೇಷವಾಗಿ “ಜನಮೆಜಯ” ಮಾಡುತಿದ್ದ ಮಹಾ ಸರ್ಪಯಾಗವನ್ನು “ಆಸ್ತಿಕ ” ಮಹರ್ಷಿಗಳು ಪ್ರಾರ್ಥನಾ ಪೂರ್ವಕವಾಗಿ ನಿಲ್ಲಿಸಿ ನಾಗಕುಲದ ಸಂರಕ್ಷಣೆ ಮಾಡಿದ ದಿನವನ್ನು “ನಾಗರಪಂಚಮಿ ” ಎಂದು ಆಚರಿಸಿಕೊಂಡು ಬರುತ್ತಿದ್ದಾರೆ.  ಈ ನಾಗರಪಂಚಮಿ ದಿನ ಮನೆಯವರೆಲ್ಲ ಸೇರಿ ತಮ್ಮ ಮೂಲ ನಾಗದೇವರ ಸನಿಧ್ಯಕ್ಕೆ ಹೋಗಿ ಪೂಜೆಯನ್ನು ಮಾಡುತ್ತಾರೆ.  ನಾಗದೇವರಿಗೆ ಪ್ರಿಯವಾದ  ಕೇದಾಗೆ, ಹಿಂಗಾರ ,ಸಂಪಿಗೆ ಹೂಗಳನ್ನು ಸಮರ್ಪಿಸಿ ಭಕ್ತಿಯಿಂದ ಪೂಜೆಯನ್ನು ಸಲ್ಲಿಸುತ್ತಾರೆ. ನಾಗರಪಂಚಮಿದಿನ, ಸುಬ್ರಹ್ಮಣ್ಯ ಷಷ್ಠಿಯಂದು ನಾಗ ದೇವರಿಗೆ ಹಾಲೆರೆಯುವ ಆಚರಣೆ ತುಳುನಾಡಿನಲ್ಲಿ ಪ್ರಸಿದ್ಧವಾಗಿದೆ.

ಕರಾವಳಿ ಪ್ರದೇಶದಾದ್ಯಂತ ಕಂಡುಬರುವ ವಿಶಿಷ್ಟ ನಾಗಬನಗಳು, ಇಲ್ಲಿ ವ್ಯಾಪಾಕವಾಗಿ ಹರಡಿರುವ ನಾಗರಾಧನೆಗೆ ಸಾಕ್ಷಿಯಾಗಿವೆ. ಗಿಡಮರಗಳಿಂದ ಕೂಡಿದ ತೋಪಿನಲ್ಲಿ ನಾಗಶಿಲೆಯನ್ನು ಪ್ರತಿಷ್ಠಾಪಿಸಿ ಆ ಜಾಗವನ್ನು "ನಾಗಬನ" ಎಂದು ಕರೆಯಲಾಗುತ್ತದೆ.  ಬನಗಳಲ್ಲಿ ನಗರಕಲ್ಲು ಪ್ರತಿಷ್ಠಾಪಿಸುವುದು ಕೂಡ ಬಹಳ ವಿಶೇಷವಾಗಿದೆ.  ಈ ನಾಗರಕಲ್ಲನ್ನು ಪ್ರತಿಷ್ಠಾಸುವಾಗ ಕೇವಲ ಒಂದು ನಾಗನ ಕಲ್ಲು ಮಾತ್ರವಲ್ಲದೆ,  2 ಕಲ್ಲು ಪ್ರತಿಷ್ಠಾಪಿಸುವುದು ಶಾಸ್ತ್ರಾನುಸಾರ ಹಾಗೂ ಪರಂಪರೆಯ ಕ್ರಮವಾಗಿದೆ.  ಮೊದಲು ಭ್ರಹ್ಮನೇತರ ಅರ್ಚಕರು ಬಂದು ಪೂಜೆ ಸಲ್ಲಿಸಿದ ನಂತರ ವಿಗ್ರಹವನ್ನು 48 ದಿನಗಳ ಕಾಲ ನೀರಿನಲ್ಲಿಡುತ್ತಾರೆ. ಈ ಸಂಧರ್ಭದಲ್ಲಿ ಮನೆಯವರು ಬಹಳ ಶುದ್ಧಚಾರ ಪಾಲಿಸಿ,  48ದಿನಗಳ ನಂತರ ಅರ್ಚಕರು ಬಂದು ವಿಗ್ರಹವನ್ನು ನೀರಿನಿಂದ ಹೊರ ತೆಗೆದು ಎಲ್ಲಾ ಪೂಜಾ ವಿಧಿವಿದಾನ ಮುಗಿಸಿದ ನಂತರ ವಿಗ್ರಹವನ್ನು ನಾಗಬನದಲ್ಲಿ ಪ್ರತಿಷ್ಠಾಪಿಸುತ್ತಾರೆ.  

ನಾಗದೇವರಿಗೆ ಸಂಬಂಧಪಟ್ಟ ವಿಶೇಷವಾದ ಆಶ್ಲೇಷ ಬಲಿಗೆ ಕುಕ್ಕೆ ಸುಬ್ರಮಣ್ಯ ಕ್ಷೇತ್ರ ಮತ್ತು ಕುಡುಪು ಕ್ಷೇತ್ರವು ಪ್ರಸಿದ್ದಿಯಾಗಿವೆ. ಆಶ್ಲೇಷ ಬಲಿ ಪೂಜೆಗೆ ನೂರಾರು ಸಂಖ್ಯೆಯಲ್ಲಿ ಭಕ್ತರು ಭಕ್ತಿಭಾವದಿಂದ  ಇಲ್ಲಿಗೆ ಸೇರುತ್ತಾರೆ. ಹೀಗೆ ತುಳುನಾಡಿನಲ್ಲಿ ನಾಗಾರಾಧನೆ ವ್ಯಾಪಾಕವಾಗಿ ಹರಡಿದೆ. ನಾಗವನ್ನು ಕಣ್ಣಿಗೆ ಕಾಣುವ ದೇವರೆಂದು ಹೇಳಬಹುದು.  ಒಟ್ಟಾಗಿ ಹೇಳಬೇಕೆಂದರೆ “ನಾಗ ನಡೆತ್ತ... ಸರ್ಪ ಜಡೆತ್ತ , ಪರಶುರಾಮ ಸೃಷ್ಠಿದ ಪೊರ್ಲುದ ನಾಡ್ ಈ ನಮ್ಮ ತುಳುನಾಡ್ ” 


ನಮ್ಮ ಸಂಸ್ಕೃತಿ  ನಮ್ಮ ಹೆಮ್ಮೆ

ಜೈ ತುಳುನಾಡ್ 


Comments

Post a Comment

Popular posts from this blog

"ಕಂಬಳ ಕ್ಷೇತ್ರದ ಸಾದಕ, ಚಾಂಪಿಯನ್ ದೂಜ"

ಕಾರ್ಕಳ - ಕಣ್ಣುಗಳಿಗೆ ಹಬ್ಬ, ಮನಸ್ಸಿಗೆ ಶಾಂತಿ

ತುಳುನಾಡಿನ ಜನಪ್ರಿಯ ಕ್ರೀಡೆ "ಕಂಬಳ"