"ಅಪ್ಪು- ತೋನ್ಸೆ : ತಮ್ಮ ಹೆಜ್ಜೆಗಳಲ್ಲೆ , ಇತಿಹಾಸ ಬರೆದರು"
"ಅಪ್ಪು- ತೋನ್ಸೆ : ತಮ್ಮ ಹೆಜ್ಜೆಗಳಲ್ಲೆ... ಇತಿಹಾಸ ಬರೆದರು"
ನಮಸ್ಕಾರ,
ತುಳುನಾಡಿನ ಕಂಬಳದ ಕೋಣಗಳು ಕ್ರೀಡಾ ಪಟ್ಟುಗಳು ಮಾತ್ರವಲ್ಲ, ಇಲ್ಲಿನ ಜನರ ಮನಸ್ಸಿನಲ್ಲಿ ಸೆಲೆಬ್ರಿಟಿಗಳಾಗಿದ್ದಾರೆ. ಕಂಬಳ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದ ಕೋಣಗಳಂತು ಇಲ್ಲಿನ ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿರುವ ಸ್ಟಾರ್ಗಳು. ಕಂಬಳ ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದು ಸಾವಿರಾರು ಅಭಿಮಾನಿಗಳ ಮನಸ್ಸು ಗೆದ್ದ ಕೋಣಗಳ ಪೈಕಿ ಕಾಂತಾವರ ಬೆಲಾಡಿ ಬಾವ ಅಶೋಕ್ ಶೆಟ್ಟಿಯವರ "ಅಪ್ಪು" ಮತ್ತು "ತೋನ್ಸೆ" ಕೂಡ ಪ್ರಖ್ಯಾತರಾಗಿರುವ ಹೆಸರುಗಳು. ಆದರೆ 2025 ಮೇ 31 ರ ಮುಂಜಾನೆ ತುಳುನಾಡಿನ ಎಲ್ಲ ಕಂಬಳ ಅಭಿಮಾನಿಗಳಿಗೆ ಎಂದಿಗೂ ಮರೆಯಲಾಗದ ಆಘಾತದ ದಿನವಾಯಿತು. ಮೊಬೈಲ್ ಪರದೆಯ ಮೇಲೆ ಹರಿದ ಆ ದು:ಖದ ಸುದ್ದಿಯು, ಕ್ಷಣಾರ್ಧದಲ್ಲಿ ಸಾವಿರಾರು ಹೃದಯಗಳಲ್ಲಿ ನೋವಿನ ಅಲೆ ಎಬ್ಬಿಸಿ, ಮನಸ್ಸನ್ನು ತೀವ್ರವಾದ ಸಂತಾಪದಲ್ಲಿ ಮುಳುಗಿಸಿತು.
ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಬಿದ್ದ ಪರಿಣಾಮವಾಗಿ ಕೋಣಗಳಿದ್ದ ಕೊಟ್ಟಿಗೆ ಸುಟ್ಟು ಹೋಗಿದ್ದು, ಬೆಳಾಡಿ ಬಾವದ ಪ್ರೀಯ ಕೋಣಗಳು "ಅಪ್ಪು" ಮತ್ತು "ತೋನ್ಸೆ" ಎಂಬ ಅಪೂರ್ವ ಪ್ರತಿಭೆಗಳನ್ನು ನಾವಿಂದು ಕಳೆದುಕೊಂಡಿದ್ದೆವೆ. ಕಂಬಳದ ಹಿರಿಮೆಯನ್ನು ಬೆಳೆಸಿದ "ಅಪ್ಪು" ಮತ್ತು "ತೋನ್ಸೆ" ತಮ್ಮ ಪ್ರತೀ ಓಟದಲ್ಲೂ ಶಕ್ತಿ, ವೇಗ ಮತ್ತು ಘನತೆಯ ಪ್ರತೀಕಗಳಾಗಿ ಮಿಂಚಿದ ಈ ಕೋಣಗಳು ಜನರ ಹೃದಯದಲ್ಲಿ ಸದಾ ಜೀವಂತವಾಗಿದೆ. ಅನೇಕ ಕಂಬಳಗಳಲ್ಲಿ ಭಾಗವಹಿಸಿ ಗೌರವ ಮತ್ತು ಪ್ರಶಸ್ತಿಗಳನ್ನು ಸಂಪಾದಿಸಿದ್ದ ಅಶೋಕ್ ಶೆಟ್ಟಿಯವರ ಕನ ಹಲಗೆ ಕೋಣಗಳು.....ನಾವಿಲ್ಲದ ಲೋಕದ ತಾರೆಗಳು.
ಬೆಲಾಡಿ ಭಾವ ಅಶೋಕ್ ಶೆಟ್ಟಿಯವರು ಒಳ್ಳೆಯ ಸ್ವಭಾವ, ದೃಢ ವ್ಯಕ್ತಿತ್ವ ಹಾಗೂ ಪ್ರಾಣಿಪ್ರೀಯರಾಗಿದ್ದ ವ್ಯಕ್ತಿ. ಈ ದುರಂತ ಸಂಭವಿಸಿದ ಬಳಿಕ ನಡೆದ ಸುದ್ದಿ ಗೋಷ್ಠಿಯಲ್ಲಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡರು. " ನನಗೆ ನನ್ನ ಗೋವಾದಲ್ಲಿರುವ ಹೋಟೆಲ್ ಸುಟ್ಟು ಹೋದರು ಇಷ್ಟು ನೋವಾಗುತ್ತಿರಲಿಲ್ಲ. ಮತ್ತೆ ಅಂತಹದ್ದೆ ಹೋಟೆಲ್ ನಿರ್ಮಿಸಬಹುದಿತ್ತು, ನನಗೇನಾದರು ಆಗಿದ್ರೂ ನಾನು ಎದುರಿಸುತ್ತಿದ್ದೆ, ಆದರೆ ಮಾತುಬಾರದೆ ನೋವು ಹೊಂದಿರುವ ಈ ನನ್ನ ಮುಗ್ದ ಮೂಕ ಪ್ರಾಣಿಗಳಿಗೆ ಇಂತಹ ಅನ್ಯಾಯ ಆಗಬಾರದಿತ್ತು. ಅವರ ಬದುಕು ಈ ರೀತಿಯಲ್ಲಿ ಮುಕ್ತಯವಾಗಬಹುದೆಂದು ನಿರೀಕ್ಷಿಸಿರಲಿಲ್ಲ". ಎಂದು ಭಾವುಕರಾದರು.
ಅವರ ಮಾತುಗಳನ್ನು ಕೇಳಿ... ಆ ದೃಶ್ಯವನ್ನು ಕಂಡ ಕ್ಷಣದಲ್ಲಿ ನಮ್ಮ ಹೃದಯವು ಭಾರವಾಗಿ ಕಣ್ಣಲ್ಲಿ ನೀರು ತುಂಬಿತು. ತಮ್ಮ ಮಕ್ಕಳಂತೆ ಪ್ರೀತಿ, ಮಮತೆಯಿಂದ ಸಾಕಿದ ಕೋಣಗಳು ಬೆಲಾಡಿ ಭಾವ ತಂಡಕ್ಕೆ ಗೌರವ ಹಾಗೂ ಹೆಸರನ್ನು ತಂದು ಕೊಟ್ಟವು. "ಅಪ್ಪು ಮತ್ತು ತೋನ್ಸೆ"ಯ ಸಾಧನೆ ಕೇವಲ ಸ್ಪರ್ಧಾ ಕ್ಷೇತ್ರದಲ್ಲಷ್ಟೆ ಅಲ್ಲ, ಇವರ ಹಿನ್ನೆಲೆ ಬಗ್ಗೆ ಮೆಲುಕು ಹಾಕುವ ಪ್ರತಿ ಕ್ಷಣವೂ ಕಂಬಳದ ಇತಿಹಾಸದ ಭಾವಪೂರ್ಣ ಅಧ್ಯಾಯವೊಂದಾಗಿ ಉಳಿಯುತ್ತದೆ. "ಅಪ್ಪು ಮತ್ತು ತೋನ್ಸೆ" ಹಲವಾರು ಕಂಬಳ ಕೂಟದಲ್ಲಿ ಭಾಗವಹಿಸಿ ಓಡಿ , ಬಹುಮಾನ ಗೆದ್ದಿವೆ. ಕಂಬಳದಲ್ಲಿ ಅವರ ಸಾಧನೆ ಅಪಾರವಾದದ್ದು. ಈ ಕ್ಷೇತ್ರದಲ್ಲಿ ಅವರು ತಂದು ಕೊಟ್ಟ ಗೌರವ ಮರೆಯಲಾಗದು.
ತೋನ್ಸೆ ಕೋಣವು ಮೊದಲಿಗೆ ತೋನ್ಸೆಯಿಂದ ಅಲೆವೂರು ತೆಂಕು ಮನೆಗೆ ತರಲಾಗುತ್ತದೆ. ಅಲೆವೂರು ತೆಂಕು ಮನೆಯ ಯಜಮಾನರು ತೋನ್ಸೆ ಮತ್ತು ರೆಂಜಾಳ ಕುಟ್ಟಿಯೊಂದಿಗೆ ಜೋಡಿ ಮಾಡಿ, ಜೂನಿಯರ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗಳಿಸುತ್ತದೆ. ಜ್ಯೂನಿಯರ್ ಇಂದ ಸೀನಿಯರ್ ವಿಭಾಗಕ್ಕೆ ಬಂದ ಅದೇ ಜೋಡಿ ಸತತವಾಗಿ ಮೂರು ವರ್ಷ ಸಿರೀಸ್ ಪ್ರಶಸ್ತಿಯನ್ನು ಮೂಡಿಗೆರಿಸುತ್ತದೆ. ನೇಗಿಲು ಹಿರಿಯ ವಿಭಾಗದಲ್ಲಿ ಈ ಜೋಡಿಯನ್ನು ಮೂರು ವರ್ಷ ಇತರ ಯಾವುದೇ ತಂಡದಿಂದಲೂ ಸೋಲಿಸಲು ಅಸಾಧ್ಯ ಎಂಬಂತೆ ವೇಗವಾಗಿ ಓಡುತ್ತದೆ. ನಂತರ ಕುಟ್ಟಿಯನ್ನು ತಡಂಬೈಲ್ ತಂಡದವರು ಮತ್ತು ತೋನ್ಸೆಯನ್ನು ಬೆಲಾಡಿ ಭಾವ ತಂಡದವರು ತಮ್ಮ ಮನೆಗೆ ತಂದರು. ಬೆಲಾಡಿ ಭಾವ ತಂಡದವರು ತೋನ್ಸೆಯನ್ನು ಅಡ್ಡಹಲಗೆ ವಿಭಾಗದಲ್ಲಿ ಓಡಿಸಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡರು.
ನಂತರ ಕನಹಲಗೆ ವಿಭಾಗದಲ್ಲಿ 2022-2023ರಲ್ಲಿ ಸಿರೀಸ್ ಬಹುಮಾನವನ್ನು ಪಡೆದುಕೊಂಡಿತ್ತು. ಬೆಲಾಡಿಗೆ ಬಂದ ನಂತರ ಕನಹಲಗೆಗೆ ಹೆಸರು ತಂದ ಕೋಣ ಎಂದರೆ ತೋನ್ಸೆ. ಸುಮಾರು 12 ವರ್ಷಗಳಿಂದ ನಿರಂತರವಾಗಿ ಪ್ರಶಸ್ತಿ ಗೆದ್ದ ಕೋಣ ತೋನ್ಸೆ. ಅದರೊಂದಿಗೆ ತೋನ್ಸೆಯ ಜತೆ "ಅಪ್ಪು" ನಾರಾವಿಯ ಯುವರಾಜ್ ಜೈನ್ ಮತ್ತು ಬೆಲಾಡಿ ಬಾವ ಅಶೋಕ್ ಶೆಟ್ಟಿಯವರಿಗೆ ಅಡ್ಡ ಹಲಗೆ ವಿಭಾಗದಲ್ಲಿ ಪ್ರಶಸ್ತಿಯನ್ನು ತಂದುಕೊಟ್ಟಿದೆ. ತೋನ್ಸೆ ನೇಗಿಲು ಕಿರಿಯ, ನೇಗಿಲು ಹಿರಿಯ ,ಹಗ್ಗ ಹಿರಿಯ ,ಅಡ್ಡ ಹಲಗೆ ,ಕನ ಹಲಗೆ ಹೀಗೆ ಐದು ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡ ಅಪರೂಪದ ಕೋಣ. ಇಂತಹ ಕೋಣಗಳ ದುರಂತ ಅಂತ್ಯ ಕಂಬಳ ಅಭಿಮಾನಿಗಳ ಮನದಲ್ಲಿ ನೋವಾಗಿ ಉಳಿಯುತ್ತದೆ. ಬಾಲಕೃಷ್ಣ ಗೌಡರು, ಜಯಕರ ಮಡಿವಾಳರು ,ಕಡಂದಲೇ ಪ್ರಸಾದ್, ಅಳದಂಗಡಿ ರವಿಕುಮಾರ್ರವರು ಈ ಕೋಣವನ್ನು ಓಡಿಸಿ ಅನೇಕ ಹೆಸರು ಮತ್ತು ಪ್ರಶಸ್ತಿಯನ್ನು ಪಡೆದಿರುತ್ತಾರೆ. "ಕನ ಹಲಗೆಯಲ್ಲಿ ತೋನ್ಸೆಯ ಓಟವನ್ನು ನೋಡುವುದೇ ಅದ್ಬುತ ಅನುಭವ.... ಮನ ಮುಟ್ಟುವ ನೋಟ...!"
ಯಜಮಾನಿಗೆ ಗೌರವ ತಂದುಕೊಟ್ಟ ಕೋಣಗಳು "ಅಪ್ಪು" ಮತ್ತು "ತೋನ್ಸೆ" - ಓಟದಲ್ಲಿ ತನ್ನ ಪ್ರಚಂಡ ವೇಗದಿಂದ ಪ್ರೇಕ್ಷಕರ ಮನ ಗೆದ್ದಿದ್ದ ಅಪರೂಪದ ಕೋಣ "ತೋನ್ಸೆ" ಅದೇ ರೀತಿಯಲ್ಲಿ ಅಪ್ಪು ಕೂಡ ತನ್ನ ಪ್ರತಿಯೊಂದು ಓಟದಲ್ಲಿ ತನ್ನ ಶಕ್ತಿಯ ಮಿತಿಯನ್ನು ಮರೆತು ಓಡುತ್ತಿದ್ದ, "ಅಪ್ಪು", ಅಡ್ಡ ಹಲಗೆ, ಕನ ಹಲಗೆಯಲ್ಲಿ ಗೆದ್ದ ಪದಕಗಳು, ಪ್ರಶಸ್ತಿಗಳೇ ಜೀವಂತ ಸಾಕ್ಷಿ. ಆದರೆ ವಿಧಿಯ ಲೆಕ್ಕಾಚಾರ ನಮ್ಮ ಲೆಕ್ಕಕ್ಕೆ ಸರಿಯಾಗದು...ಅದು ಯಾವತ್ತೂ ಅಸಾಧ್ಯಾ ಎಣಿಕೆಯ ಆಟ.
ಮಳೆಯ ಅಂಜಿಕೆಯಿಂದಾಗಿ, ಒಣಹುಲ್ಲನ್ನು ಸುರಕ್ಷಿತವಾಗಿಡಲು ಕೊಟ್ಟಿಗೆಯ ಮೇಲ್ಚಾವಣಿಯಲ್ಲಿ ಜೋಡಿಸಿದ್ದರು. ಆದರೆ ಒಂದು ನಿಶ್ಶಬ್ದ ರಾತ್ರಿ ವೇಳೆ ಮೇಲ್ಚಾವಣಿಯ ಪಕ್ಕದಲ್ಲಿದ್ದ ಎಲೆಕ್ಟ್ರಿಕ್ ಫ್ಯಾನ್ನಿಂದಾಗಿ ಏಕಏಕಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿತು. ಹೊತ್ತಿ ಉರಿದ ಹುಲ್ಲು ತಕ್ಷಣವೆ ಕೆಳಗೆ ಬಿದ್ದು "ಅಪ್ಪು" ಮತ್ತು "ತೋನ್ಸೆ" ಯನ್ನು ಆವರಿಸಿಕೊಂಡು ಆ ಮೂಕ ಜೀವಗಳನ್ನೆ ಕಸಿದುಕೊಂಡಿತು. ಯಾರಿಗೂ ತಿಳಿಯದೆ... ಊಹಿಸಲಾರದಂತಹ ದುರಂತ ಸಂಭವಿಸಿತು. ಬೆಂಕಿಯಲ್ಲಿ ಕರಗಿದ ಶರೀರಗಳ ಹಿಂದೆ ಉಳಿದದ್ದು - ಅವರ ಹೆಸರು, ಅವರ ಸಾಧನೆ, ಮತ್ತು ನಾವಿಲ್ಲಿ ಅನುಭವಿಸುತ್ತಿರುವ ನೆನಪುಗಳು ಮಾತ್ರ ಉಳಿದಿವೆ. "ಅಪ್ಪು" ಮತ್ತು "ತೋನ್ಸೆ" ಈಗ ಕಾಲದ ಹರಿವಿನಲ್ಲಿ ಕರಗದ ನೆನಪುಗಳಾಗಿ , ನಮ್ಮ ಹೃದಯದಲ್ಲಿ ಸದಾ ಜೀವಂತವಾಗಿದ್ದಾರೆ.
"ಇಂತಹ ದು:ಖದ ಪರಿಸ್ಥಿತಿ ಯಾರಿಗೂ ಎದುರಾಗಬಾರದು ಎಂದು ನಾವು ಪ್ರಾರ್ಥಿಸುತ್ತೆವೆ. ತಮ್ಮ ಮಕ್ಕಳಂತೆ ಹೆಚ್ಚು ಮಮತೆಯಿಂದ ಸಾಕಿದ ಕೋಣಗಳು, ಕಣ್ಣೆದುರು ಪ್ರಾಣ ಕಳೆದುಕೊಳ್ಳುವ ನೋವನ್ನು ಭುಗಿಲೆಬ್ಬಿಸುವ ಈ ಘಟನೆಗೆ ಸಹನೆ ದೊರಕಲಿ ಎಂದು ಭಗವಂತನ ಕೃಪೆ ಬೇಡುತ್ತೇವೆ. ಈ ದು:ಖವನ್ನು ಭರಿಸುವ ಶಕ್ತಿ ದೇವರು ಅವರಿಗೆ ನೀಡಲಿ ಎಂಬುವುದು ನಮ್ಮ ಹೃದಯ ಪೂರ್ವಕ ಪ್ರಾರ್ಥನೆ".
ಜೈ ಕಂಬಳ
ನಮ್ಮ ಸಂಸ್ಕೃತಿ.... ನಮ್ಮ ಹೆಮ್ಮೆ
ಜೈ ತುಳುನಾಡ್
👍
ReplyDeleteGud,,❤️
ReplyDelete