"ಕರಾವಳಿಯ ದೈವ ಶಕ್ತಿ"
"ಕರಾವಳಿಯ ದೈವ ಶಕ್ತಿ"
ನಮಸ್ಕಾರ,
ತುಳುನಾಡು ಎಂದರೆ ಕರಾವಳಿ ಕರ್ನಾಟಕದ ಒಂದು ವಿಶೇಷ ಭೂಭಾಗ. ಇದು ಕಪ್ಪು ಮಣ್ಣಿನ ನಾಡು ಕೂಡ ಹೌದು. ಇಲ್ಲಿನ ಭಾಷೆ, ಸಂಸ್ಕ್ರತಿ, ಧಾರ್ಮಿಕ ಆಚರಣೆಗಳೊಂದಿಗೆ ಪ್ರಸಿದ್ಧವಾಗಿದೆ. ದೈವರಾಧನೆ, ನಾಗಾರಾಧನೆ, ಯಕ್ಷಗಾನ,ಕಂಬಳ ಹೀಗೆ ಹತ್ತು ಹಲವು ಸಾಂಪ್ರದಾಯಿಕ ಹಿನ್ನೆಲೆ ಇರುವಂತಹ ನಾಡು ಎಂದರೆ ಅದು ಈ ನಮ್ಮ ತುಳುನಾಡು. ಇಲ್ಲಿನ ಕೆಲವು ವಿಶೇಷವಾದ ಸಂಸ್ಕ್ರತಿಯನ್ನು ತಿಳಿಸುವ ಪ್ರಯತ್ನದಲ್ಲಿದ್ದೆವೆ. ಇಲ್ಲಿ ನಾವಿಂದು ದೈವಾರಾಧನೆ ಕಡೆ ಕಣ್ಣು ಹಾಯಿಸುವ. ದೈವಾರಾಧನೆಗೆ ಇಲ್ಲಿ ವಿಶೇಷವಾದ ಸ್ಥಾನಮಾನವಿದೆ. ತುಳುನಾಡು ಪ್ರದೇಶದ ಜನರು ಪ್ರಕೃತಿ, ಪ್ರಾಣಿಗಳು ಮತ್ತು ಭೂಮಿಯನ್ನು ಪವಿತ್ರವೆಂದು ಭಾವಿಸಿ, ತಮ್ಮ ಜೀವನವನ್ನು ರಕ್ಷಿಸುವ ಮತ್ತು ನೆಮ್ಮದಿಯನ್ನು ನೀಡುವ ದೈವಗಳಿಗೆ ಆರಾಧನೆ ಮಾಡುತ್ತಾರೆ. ದೈವಾರಾಧನೆಯು ಇಲ್ಲಿನ ಜನರ ಜೀವನದ ಒಂದು ಭಾಗವಾಗಿದೆ. ದೈವಾರಾಧನೆಯನ್ನು ತುಳುನಾಡಿನ ಜನರು ಅವರ ಪೂರ್ವಜರ ಕಾಲದಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ದೈವದ ಮೇಲೆ ಇಲ್ಲಿನ ಜನರಿಗೆ ಅಪಾರವಾದ ಭಕ್ತಿ, ಪ್ರೀತಿ ಇದೆ.
ತುಳುನಾಡಿನ ಜನರು ದೈವವನ್ನು ತಮ್ಮ ಮನೆ ಮಗನಂತೆ ಭಾವಿಸುತ್ತಾರೆ. ಯಾವುದೇ ಕಷ್ಟ, ನಷ್ಟ , ಬೇಜಾರಿದ್ದರು ದೈವದ ಮುಂದೆ ನಿಂತು ಒಪ್ಪಿಸುತ್ತಾರೆ. ಏಕೆಂದರೆ ನಾವು ನಂಬಿದ ದೈವ ನಮ್ಮನ್ನು ಕಾಯುತ್ತದೆ, ನಮ್ಮ "ಕೈ" ಹಿಡಿಯುತ್ತದೆ ಎಂಬ ನಂಬಿಕೆ. ತುಳುನಾಡಿನ ಜನರು ಓದಿ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದು, ವಿದೇಶಕ್ಕೆ ಹೋದರು ತಮ್ಮ ಹಿಂದಿನ ಅನುಭವಗಳು, ಮೂಲ ಸಂಸ್ಕೃತಿಕ ದಾರಿಯನ್ನು ಮರೆಯುವುದಿಲ್ಲ. ಅಲ್ಲಿಯು ದೈವವನ್ನು ನೆನೆಯುವುದುಂಟು. ದೈವಾರಾಧನೆ ಎಂದರೆ ದೈವಗಳ ಆರಾಧನೆ.
ದೈವವನ್ನು ಹಲಸಿನ ಮರದ ಮಂಚದಲ್ಲಿ ಆಹ್ವಾನಿಸಿ ಆರಾಧಿಸುತ್ತಾರೆ. ಹಲಸಿನ ಮರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದರಲ್ಲಿ ಹಲವಾರು ವಿಧಿ ವಿಧಾನಗಳಿವೆ. ತುಳುನಾಡಿನ ನೂರು ವರ್ಷಗಳ ಪೂರ್ವ ಕಾಲದಿಂದಲೂ ಯಾವುದೇ ಪರಿಕರಗಳು ಇರಲಿಲ್ಲ. ಕಾಲಕ್ರಮೇಣ ಮಲಗುವ ಮಂಚವನ್ನು ವಿಶೇಷ ಸಂದರ್ಭದಲ್ಲಿ ಶುದ್ಧಿಕರಿಸಿ, ಅದರ ಮೇಲೆ ಸುತ್ತೆ ಪನಿಯರವನ್ನು ಬಡಿಸುತ್ತಿದ್ದರು. ಇದು ದೈವ ಪೂಜೆಯ ಸರಳ ವಿಧನವಾಗಿತ್ತು. ಹೀಗೆ ಮುಂದೆ "ಮದನಾಕೈ" ಎಂಬ ಮಂಚದ ಕ್ರಮ ಪರಿಚಯವಾಯಿತು. ಇದನ್ನು ಮನೆಯ ಚಾವಡಿಯ ದಕ್ಷಿಣ ಮತ್ತು ಪಶ್ಚಿಮ ಭಾಗಕ್ಕೆ ಅಥವಾ ಪಡು ಭಾಗಕ್ಕೆ ಪೂಜಿಸಲಾಯಿತು.
ದಪ್ಪವಾದ 2 ಮರದ ತುಂಡನ್ನು ನಿರ್ದಿಷ್ಟ ಅಂತರದಲ್ಲಿ ಜೋಡಿಸಿ ಅದರ ಮೇಲೆ ಹಲಗೆಯನ್ನಿಟ್ಟು, ದೈವವನ್ನು ನಂಬುತ್ತಿದ್ದರು. ಅದಾದ ಕೆಲಕಾಲದ ನಂತರ ನಾಲ್ಕು ಕಾಲುಗಳಿರುವ ಮರದ ದೊಡ್ಡ ಗಾತ್ರದ ಮಂಚದ ಕ್ರಮ ಚಲಾವಣೆಗೆ ಬಂತು. ಕೆಲವು ವಿಶೇಷ ದಿನಗಳಲ್ಲಿ ಈ ಮಂಚವನ್ನು ಹೊರತಂದು ಸ್ವಚ್ಚಗೊಳಿಸುತ್ತಿದ್ದರು. ಕತ್ತರಿ ಮಂಚದ ಸಾಂಪ್ರದಾಯ ಬಂತು, ಇದೂ ತನ್ನದೇ ಆದ ಉದ್ದ ಅಗಲ ಆಯಾಮಗಳನ್ನು ಹೊಂದಿತ್ತು. ಈ ಕತ್ತರಿ ಮಂಚದ ಅವಧಿಯಿಂದ "ಉಯ್ಯಲೆ ಮಂಚ"ದಲ್ಲಿ ದೈವವನ್ನು ಪೂಜಿಸುವ ಪದ್ಧತಿ ಆರಂಭವಾಯಿತು. ಹೀಗೆ ದೈವಾದಾದನೆಯಲ್ಲಿ ದೈವದ ಮಂಚವು ದೈವಪೂಜೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ನಿರ್ವಹಿಸುತ್ತದೆ.
ಈ ಮಂಚದ ಮೇಲೆ ದೈವದ ಮೂರ್ತಿ, ಆಯುಧ, ಮಣಿ, ನೀರು, ಮತ್ತು ದೀಪಗಳನ್ನು ಇಟ್ಟು, ವಿಶೇಷ ದಿನಗಳಲ್ಲಿ ಪನಿಯರವನ್ನು ಕೂಡ ದೈವಕ್ಕೆ ಅರ್ಪಿಸಲಾಗುತ್ತದೆ. ಮನೆಯ ಹಿರಿಯರು ಅಥವಾ ಕುಟುಂಬದ ಮುಖ್ಯಸ್ಥರು ದೈವಪೂಜೆಯ ಕಾರ್ಯನ್ನು ಮಾಡುತ್ತಾರೆ. ಈ ದೈವಗಳು ಪ್ರತಿದಿನವು, ಮಂಚದ ಮೇಲೆಯೇ ಇರುತ್ತದೆ, ಅದನ್ನು ಹೊರಗೆ ತರುವಂತಿಲ್ಲ ಆದರೆ ದೈವದ ಕೋಲದಂದು ದೈವಕ್ಕೆ ಸಂಬಂಧ ಪಟ್ಟಂತಹ ಎಲ್ಲಾ ಉಪಕರಣಗಳನ್ನು ಹೊರತರಲಾಗುತ್ತದೆ. ಇದನ್ನು ತುಳುವಿನಲ್ಲಿ "ಭಂಡಾರ" ಎನ್ನುತ್ತಾರೆ. ದೈವಕ್ಕೆ ಕೋಲ ಎಂದರೆ "ದೈವದ ನರ್ತನ ಸೇವೆ". ವರ್ಷ ವರ್ಷಕ್ಕೆ ದೈವಗಳಿಗೆ ನರ್ತನ ಸೇವೆಯನ್ನು ನೀಡುತ್ತಾರೆ.
ದೈವಗಳಲ್ಲಿ ಕೆಲವು ರಕ್ತಹಾರದ ದೈವಗಳಿವೆ, ಆ ದೈವಗಳಿಗೆ ಜೀವಂತ ಕೋಳಿಯನ್ನು ಆಹಾರವಾಗಿ ನೀಡಲಾಗುತ್ತದೆ. ಈ ಕೋಲದ ದಿನದಂದು ಮನೆಯ ಅಂಗಳಕ್ಕೆ "ದೊಂಪ" ಎಂದರೆ ಚಪ್ಪರವನ್ನು ಹಾಕಿ ಮಾವಿನ ಎಲೆಯ ತೋರಣಗಳಿಂದ ಅಲಂಕರಿಸಲಾಗುತ್ತದೆ. ಈ ಕೋಲವನ್ನು ಮೂರು ಜನಾಂಗದವರಿಂದ ಕಟ್ಟಲಾಗುತ್ತದೆ. ಪರವರು, ನಲ್ಕೆಯವರು, ಪಂಬದರು. ಇವರಿಗೆ ಕೋಲದ ದಿನಾಂಕವನ್ನು ತಿಳಿಸಲು ಹೋಗುವಾಗ ವೀಳ್ಯದ ಎಲೆ, ಅಡಿಕೆ ಮತ್ತು ಹಣವನ್ನು ಕೊಟ್ಟು ಕೋಲದ ದಿನವನ್ನು ತಿಳಿಸಬೇಕು. ಅವರ ಸಿದ್ದತೆಗಳನ್ನು ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ.
ಪ್ರತಿ ದೈವಕ್ಕೂ ಅದರದ್ದೆ ಆದ ಬಣ್ಣ, ಬಟ್ಟೆಗಳು ಇರುತ್ತವೆ. ಬೆಳ್ಳಿ ಅಥವಾ ಪಂಚಲೋಹಗಳಿಂದ ತಯಾರಿಸಿದ ಗಗ್ಗರ, ತಲೆ ಪಟ್ಟಿ, ಧರಿಸಿ ಕೋಲಕ್ಕೆ ಸಿದ್ದವಾಗುತ್ತಾರೆ. ಅದೇ ರೀತಿ ದೈವವು ಹೆಣ್ಣು ಶಕ್ತಿಯಾಗಿದ್ದರೆ, ಪಟ್ಟೆ ಸೀರೆಯನ್ನುಟ್ಟು ಸಿದ್ದವಾಗುತ್ತಾರೆ. ತೆಂಗಿನ ಗರಿಯಿಂದ ತಯಾರಿಸಿದ ಸಿರಿಯ ಅಣಿಗೆ ಈ ಕೋಲ ಆಚರಣೆಯಲ್ಲಿ ಪ್ರಮುಖ ಸ್ಥಾನವಿದೆ. ದೈವದ ಮಂಚದ ಮೇಲೆ ಒಂದು ತೆಂಗಿನಕಾಯಿಯನ್ನಿಟ್ಟು ಮನೆಯ ಯಜಮಾನರು ಸಹಿತ ದೈವದ ಭಂಡಾರವನ್ನು ಹೊರ ತರುತ್ತಾರೆ. ಅದನ್ನು ದೈವದ ಕೋಲಕ್ಕೆ ಅನುಗುಣವಾಗಿ ಜೋಡಿಸುತ್ತಾರೆ. ಹಾಗೆಯೇ ದೈವ ನರ್ತಕನಿಗೆ "ಎಣ್ಣೆ ಬೂಲ್ಯ" ನೀಡುತ್ತಾರೆ. "ಎಣ್ಣೆ ಬೂಲ್ಯ" ನೀಡುವಾಗ ದೈವದ ಪಾಡ್ದನ ಮುಖಾಂತರ ದೈವ ನರ್ತಕ ದೈವವನ್ನು ಸ್ಮರಿಸುತ್ತಾನೆ.
ಅಂಗಳಕ್ಕೆ ದೈವದ ಆಗಮನವು ಒಂದು ಕ್ಷಣ ಮೈ "ಜುಂ" ಅನಿಸುವಂತಿರುತ್ತದೆ. ಆ ಗಗ್ಗರದ ಶಬ್ದ ಹಾಗೂ ದೈವದ ದರ್ಶನವನ್ನು ಪಡೆಯಲು ಊರಿನ ಹತ್ತಾರು ಜನರು ದೈವದ ನರ್ತನವನ್ನು ಕಣ್ತುಂಬಿಕೊಳ್ಳಲು, ಮತ್ತು ಅನುಗ್ರಹವನ್ನು ಪಡೆಯಲು ಸೇರುತ್ತಾರೆ. ಪ್ರತಿ ದೈವಗಳಿಗೂ ತೆಂಬರೆಯೊಂದಿಗೆ ಹೇಳುವ ಪಾಡ್ದನಗಳು ಕೇಳೋಕೆ ಹಿತವೆನಿಸುತ್ತದೆ. ರಾತ್ರಿ ಪೂರ್ತಿ ನಿದ್ದೆ ಬಿಟ್ಟು ನುಡಿಸುವ ವಾದ್ಯ, ಬ್ಯಾಂಡ್ ಬಡಿಯುವ ತಂಡಗಳು, ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಇಡುವ ದೈವ ನರ್ತನವನ್ನು ನೋಡುವುದೆ ಕಣ್ಣಿಗೆ ಹಬ್ಬ. ಎಲ್ಲಾವನ್ನು ಮರೆತು ಕೋಲದ ಲೋಕದಲ್ಲೆ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೆವೆ.
ದೈವದ ಕೋಲದ ಸಮಯದಲ್ಲಿ ಗುತ್ತು ಬರ್ಕೆಯವರನ್ನು ಕರೆಯುವುದು ವಾಡಿಕೆ. ಗುತ್ತು, ಬರ್ಕೆ ಎಂದರೆ ತುಳುವಿನ ಆಳ್ವಿಕೆಯಲ್ಲಿ ಅರಸು ಮನೆತನ, ಇಡೀ ತುಳುವರ ಆಚರಣೆ ಮತ್ತು ದೈವದ ಪೂಜೆಗಳನ್ನು ಸಾಂಪ್ರದಾಯ ಬದ್ದವಾಗಿ ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಾಗೆಯೇ ಇವರಿಗೆ ಕೋಲಕ್ಕೆ ವಿಶೇಷ ಆಹ್ವಾವನ್ನು ನೀಡಲಾಗುತ್ತಾದೆ. ನರ್ತನದ ವೇಳೆ ದೈವವು ಅವರ ಬಳಿ ಹೋಗಿ ವಿಶೇಷ ಗೌರವವನ್ನು ಸೂಚಿಸುತ್ತದೆ.
ದೈವರಾಧನೆಯು ತುಳುನಾಡಿನಲ್ಲಿ, ಸಣ್ಣ ಮರದಂತೆ ಕಂಡರು, ಇದರ ಬೇರುಗಳು ತುಂಬಾ ವಿಶಾಲವಾಗಿ ವ್ಯಪಿಸಿದೆ. ಜನರು ತಾವು ನಂಬಿದ ದೈವದ ಮುಂದೆ ನಿಂತು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳುತ್ತಾರೆ. ಕೋಲದ ಸಮಯದಲ್ಲಿ ದೈವವು ನೊಂದ ಮನಸ್ಸಿಗೆ ಪರಿಹಾರ, ಮತ್ತು ಸಾಂತ್ವನವನ್ನು ಹೇಳುತ್ತದೆ. ದೈವದ ಒಂದು ನುಡಿಯಿಂದ ದೈರ್ಯ ಹಾಗೂ ನೆಮ್ಮದಿಯಿಂದ ಜೀವಿಸುತ್ತಾರೆ. ಮನೆಗೆ ಅಥವಾ ಊರಿಗೆ ಸಂಬಂಧ ಪಟ್ಟ ದೈವವಾಗಿದ್ದರು ಜನರು ಅದೇ ಭಯ ಭಕ್ತಿಯಿಂದ ಆರಾಧಿಸುತ್ತಾರೆ.
ಸುಮಾರು ವರ್ಷಗಳ ಹಿಂದೆ ಸತ್ಯಯುಗದಲ್ಲಿ ಕಾರ್ಣಿಕ ಪುರುಷರು ದೈವಶಕ್ತಿಗಳಾಗಿದ್ದನ್ನು ಕಾಣಬಹುದು. ಮನುಷ್ಯರಾಗಿ ಹುಟ್ಟಿ ಅವರು ಮುಕ್ತಿಯ ನಂತರ ಮೂಲ ಪುರುಷರಾಗಿ, ಕಾರ್ಣಿಕ ಪುರುಷರಾಗಿ ದೈವಗಳಾಗಿದ್ದಾರೆ. ಕೋಟಿ-ಚೆನ್ನಯ, ಕಾಂತ ಬಾರೆ -ಬೂದಾಬಾರ, ಕರಿಯ ದೇಸಿಂಗರಾಯ, ಬೋಳಿಯ ದೇಸಿಂಗರಾಯ, ಕಲ್ಕುಡ-ಕಲ್ಲುರ್ಟಿ, ಕಾನದ- ಕಟ್ಟದ, ಎಡ್ಮೂರದೆಯ್ಯು - ಭದ್ರಕಂಡ್ಜ, ಕೆಳದ ಪೆರ್ಣು, ತನಿಮನಿಗ ಕೊರಗಜ್ಜ, ಹೀಗೆ ಹಲವಾರು ಜನರನ್ನು ಕಾರ್ಣಿಕ ಪುರುಷರನ್ನಾಗಿ ಕಾಣಬಹುದು. ಒಂದೂಂದು ದೈವಕ್ಕೂ ಒಂದೊಂದು ವಿಶೇಷತೆಗಳಿವೆ. ಅವುಗಳ ಕಾರ್ಣಿಕವೂ ಅಷ್ಟೆ ಸತ್ಯ.
ದೈವರಾಧನೆಯನ್ನು ಬರವಣಿಗೆಯ ಮುಖಾಂತರ ವರ್ಣಿಸಲು, ಒಂದೇ ಭಾಗದಲ್ಲಿ ಮುಗಿಯೋದಲ್ಲ, ನಾವು ಇದರ ಬಗ್ಗೆ ಬರೆದಷ್ಟು ಮುಗಿಯುದಿಲ್ಲ. ಅರಿತಷ್ಟಿದೆ, ಕಲಿತಷ್ಟು ಇದೆ. ತುಳುನಾಡಿನಲ್ಲಿ ದೇವಸ್ಥಾನಳಷ್ಟೆ... ದೈವಸ್ಥಾನಗಳಿದೆ... ಇದೊಂದು ಅಂತ್ಯವಿಲ್ಲದ ಆರಂಭ. ನಕ್ಷತ್ರವನ್ನು ಎಣಿಸಲಾಗದಷ್ಟು ಕಠಿಣ. ತುಳುನಾಡಿನ ಜನರಿಗೆ ದೈವರಾಧನೆಯ ನಂಬಿಕೆ ಅಪಾರ. ಆದರೆ ಇದು ಮನರಂಜನೆಯ ವೇದಿಕೆಯ ಮೇಲೆ ಪ್ರದರ್ಶನವಾಗದೆ. ಭಕ್ತಿ ಇರುವಲ್ಲಿ ಮಾತ್ರ ನಡೆಯಬೇಕಿದೆ. ನಮ್ಮ ಸಂಸ್ಕ್ರತಿಯನ್ನು ಉಳಿಸೋಣ, ಬೆಳೆಸೋಣ ಸಾದ್ಯವಾದಷ್ಟು ತಿಳಿಸೋಣ.
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ
ಜೈ ತುಳುನಾಡ್
ಇನ್ನಷ್ಟು ಕೂತೂಹಲಕಾರಿ ವಿಷಯಗಳನ್ನು ನೀವಿಲ್ಲಿ ನೋಡಬಹುದು. coastal content weave Website page follow ಮಾಡಿ ಹಾಗೇ comment ಜೊತೆಗೆ Support ಮಾಡಿ
ReplyDeleteNys❤️
ReplyDelete👍 nice
ReplyDeleteNice pics
ReplyDelete